Search This Blog

ജാലകം

Total Pageviews

Friday, December 18, 2015

ವಯನಾಡ್

ಜನಸಂಖ್ಯೆ: 671,195 (2001 ಜನಗಣತಿ)

ಎತ್ತರ: ಸಮುದ್ರ ಮಟ್ಟದಿಂದಿಂದ 700-2100 ಮೀ ಮೇಲೆ

ಎತ್ತರದ ಮನೋಹರ ಪಶ್ಚಿಮಘಟ್ಟಗಳ ಮೇಲೆ ಜೈವಿಕ ವೈವಿಧ್ಯತೆಯನ್ನೊಳಗೊಂಡ 2,132 ಚದರ ಕಿಲೋಮೀಟರುಗಳ ಪ್ರದೇಶವನ್ನು ವ್ಯಾಪಿಸಿಕೊಂಡಿರುವ ವಯನಾಡು ತನ್ನ ಶುಭ್ರ ಪರಿಸರವನ್ನುಳಿಸಿಕೊಂಡಿರುವ  ಕೇರಳದ ಕೆಲವೇ ಜಿಲ್ಲೆಗಳಲ್ಲಿ ಒಂದು. ಈ ಪ್ರದೇಶದ ಭೂಮಿಯಲ್ಲಿ ನಾಗರೀಕತೆಯು ಇನ್ನೂ ಮುಟ್ಟಿರದ ಹಲವು ಅತಿ ಹಳೆಯದಾದ ಬುಡಕಟ್ಟುಗಳು ಇವೆ. ಅಂಬಲಕುತಿಮಲ ಮತ್ತು ಎಡಕ್ಕಲ್ಲಿನ ಕೆಳಬೆಟ್ಟಗಳಲ್ಲಿ ಪೂರ್ವೇತಿಹಾಸದ ಕಾಲದ ಮೊತ್ತಮೊದಲಿನ ಕೆತ್ತನೆಗಳು ಪೂರ್ವೇತಿಹಾಸದ ಕಾಲದ ಸಂಸ್ಕೃತಿಯ ಮಧ್ಯಪ್ರಾಚೀನ ಯುಗದವರೆಗೂ ಇದ್ದಿತೆಂಬುದರ ಕುರುಹಾಗಿದೆ. ಎದ್ದುಕಾಣುವ ಚಿತ್ರಸದೃಶವಾಗಿರುವ ಇದು ಉಪೋಷ್ಣವಲಯದ ಹುಲ್ಲುಗಾಡುಗಳು, ಸುಂದರ ಗಿರಿಧಾಮಗಳು, ವಿಶಾಲವಾದ ಸಾಂಬಾರದ ತೋಟಗಳು, ಸೊಂಪಾದ ಅರಣ್ಯಗಳು ಮತ್ತು ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ. ಕಾಡುಮೇಡು ಪ್ರದೇಶ, ಚರಿತ್ರೆ ಮತ್ತು ಸಂಸ್ಕೃತಿಗಳ ಸಂಗಮವಾದ ವಯನಾಡು ಭವ್ಯವಾದ ಡೆಕ್ಕನ್ ಪ್ರಸ್ಥಭೂಮಿಯ ದಕ್ಷಿಣ ಶಿಖರದ ಮೇಲೆ ನೆಲೆಗೊಂಡಿದೆ.
  • ಸಮೀಪದ ವಿಮಾನ ನಿಲ್ದಾಣ: ಕೋಜಿಕ್ಕೋಡ್
  • ಸಮೀಪದ ರೈಲು ನಿಲ್ದಾಣ: ಕೋಜಿಕ್ಕೋಡ್

ಜಿಲ್ಲೆಯ ಪ್ರಮುಖ ಪಟ್ಟಣಗಳು ಮತ್ತು ಅತಿ ಸಮೀಪದ ರೈಲು ನಿಲ್ದಾಣದಿಂದ ಇರುವ ದೂರ:
  • ಕಲ್ಪೆಟ್ಟ: ಕೋಜಿಕ್ಕೋಡ್ ನಿಂದ 72 ಕಿ.ಮೀ
  • ಮಾನಂದವಾಡಿ: ತಲಚೆರಿಯಿಂದ 80 ಕಿ.ಮೀ / ಕೋಜಿಕ್ಕೋಡ್ ನಿಂದ 106 ಕಿ.ಮೀ
  • ಸುಲ್ತಾನ್ ಬತೇರಿ: ಕೋಜಿಕ್ಕೋಡ್ ನಿಂದ 97 ಕಿ.ಮೀ
  • ವೈಥಿರಿ: ಕೋಜಿಕ್ಕೋಡ್ ನಿಂದ 60 ಕಿ.ಮೀ

ರಸ್ತೆಗಳು: ಕೋಜಿಕ್ಕೋಡ್, ಕಣ್ಣೂರು, ಊಟಿ (ಕಲ್ಪೆಟ್ಟದಿಂದ 175 ಕಿ.ಮೀ) ಮತ್ತು ಮೈಸೂರು (ಕಲ್ಪೆಟ್ಟದಿಂದ 140 ಕಿ.ಮೀ) ಗಳಿಂದ ಸಂಪರ್ಕವನ್ನುಹೊಂದಿದೆ. 
ಚೆಂಬ್ರ ಶಿಖರ
2100 ಮೀಟರ್ ಎತ್ತರದಲ್ಲಿರುವ ಉನ್ನತವಾದ ಈ ಶಿಖರವು ವಯನಾಡಿನ ದಕ್ಷಿಣ ಭಾಗದಲ್ಲಿರುವ ಮೆಪ್ಪಾಡಿಯಲ್ಲಿದೆ. ಇದು ಈ ಪ್ರದೇಶದಲ್ಲಿರುವ ಅತ್ಯಂತ ಎತ್ತರವಾದ ಶಿಖರವಾಗಿದ್ದು ಇದನ್ನು ಹತ್ತುವುದು ನಿಮ್ಮ ದೈಹಿಕ ಶಕ್ತಿಗೆ ಸವಾಲಾಗಿರುತ್ತದೆ. ಚೆಂಬ್ರ ಶಿಖರವನ್ನು ಹತ್ತುವುದು ಒಂದು ಅಹ್ಲಾದಕರವಾದ ಅನುಭವವಾಗಿದ್ದು, ಶಿಖರದ ಕಡೆಗೆ ಮೇಲೇರಿದಂತೆಲ್ಲಾ ಪ್ರತಿಯೊಂದು ಹಂತದ ಆರೋಹಣವೂ ವಯನಾಡಿನ ಭಿನ್ನವಾದ ವಿಹಂಗಮ ನೋಟವನ್ನು ತೆರೆದಿಡುತ್ತದೆ. ಹತ್ತಿ ಇಳಿಯುವುದಕ್ಕೆ ಒಂದು ದಿನ ಪೂರ್ತಿಯಾಗಿ ಬೇಕಾಗುತ್ತದೆ. ಶಿಖರದಲ್ಲಿ ವಾಸ ಮಾಡಲು  ಇಷ್ಟವಿರುವವರಿಗೆ ಮರೆಯಲಾಗದ ಅನುಭವವಾಗುತ್ತದೆ.

ಬಿಡಾರಿ ಹೂಡುವ ಸರಂಜಾಮುಗಳಿಗೆ ವಯನಾಡಿನ ಕಲ್ಪೆಟ್ಟದಲ್ಲಿರುವ ಜಿಲ್ಲಾ ಟೂರಿಸಂ ಪ್ರಮೋಶನ್ ಕೌನ್ಸಿಲನ್ನು ಸಂಪರ್ಕಿಸಬಹುದು.

ನೀಲಿಮಲ
ವಯನಾಡಿನ ನೈರುತ್ಯಭಾಗದಲ್ಲಿರುವ ಇದನ್ನು ಕಲ್ಪೆಟ್ಟ, ಸುಲ್ತಾನ್ ಬತೇರಿಯ ಮೂಲಕವೂ ತಲುಪಬಹುದಾಗಿದ್ದು, ಹಲವು ಟ್ರೆಕ್ಕಿಂಗ್ ಮಾರ್ಗಗಳ ಆಯ್ಕೆಗಳಿರುವ ನೀಲಿಮಲ  ಟ್ರೆಕ್ಕಿಗರ ಆನಂದವಾಗಿರುತ್ತದೆ. ನೀಲಿಮಲದ ತುದಿಯಲ್ಲಿನ ನೋಟವು ಹತ್ತಿರದಲ್ಲಿಯೇ ಇರುವ ಮೀನುಮುಟ್ಟಿ ಜಲಪಾತ ಮತ್ತು ಮುಂಭಾಗದಲ್ಲಿರುವ ಕಣಿವೆಗಳ ಮನಮೋಹಕ ದೃಶ್ಯಗಳನ್ನೊಳಗೊಂಡಿರುತ್ತದೆ.

ಮೀನುಮುಟ್ಟಿ
ನೀಲಿಮಲಕ್ಕೆ ಅತಿ ಸಮೀಪದಲ್ಲಿರುವ ನಯನಮನೋಹರವಾದ ಜಲಪಾತವನ್ನು ಊಟಿ ಮತ್ತು ವಯನಾಡನ್ನು ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ 2 ಕಿ.ಮೀ ಟ್ರೆಕ್ಕಿಂಗ್ ಹಾದಿಯ ಮೂಲಕ ತಲಪಬಹುದು. ಇದು ವಯನಾಡ್ ಜಿಲ್ಲೆಯ ಅತಿ ದೊಡ್ಡ ಜಲಪಾತವಾಗಿದ್ದು, 300 ಮೀಟರ್ ಎತ್ತರದಿಂದ ಮೂರು ಹಂತಗಳಲ್ಲಿ ಬೀಳುತ್ತದೆ.

ಚೇತಾಲಯಂ
ವಯನಾಡಿನ ಉತ್ತರಭಾಗದಲ್ಲಿ ಸುಲ್ತಾನ್ ಬತೇರಿಗೆ ಸಮೀಪದಲ್ಲಿರುವ ಚೇತಾಲಯಂ ಜಲಪಾತವು ಇನ್ನೊಂದು ಪ್ರವಾಸಿಗರ ಮೆಚ್ಚಿನ ತಾಣವಾಗಿದೆ. ಹೋಲಿಕೆಯಲ್ಲಿ ಇದು ಮೀನುಮುಟ್ಟಿಗಿಂತ ಗಾತ್ರದಲ್ಲಿ ಸಣ್ಣದಾಗಿದೆ. ಜಲಪಾತ ಮತ್ತು ಇದರ ಸುತ್ತಮುತ್ತಲಿನ ಪ್ರದೇಶಗಳು ಟ್ರೆಕ್ಕಿಂಗಿಗೆ ಮತ್ತು ಪಕ್ಷಿವಿಕ್ಷಣೆಗೆ ಪ್ರಶಸ್ತವಾದ ತಾಣವಾಗಿವೆ.

ಪಕ್ಷಿಪಾತಲಂ
ಪಕ್ಷಿಪಾತಾಳಂ 1700 ಮೀಟರುಗಳಿಗಿಂತಲೂ ಹೆಚ್ಚು ಎತ್ತರವಿರುವ ಬ್ರಹಗಿರಿ ಬೆಟ್ಟಗಳ ಆರಣ್ಯದ ಬಹಳ ಒಳಗಿರುತ್ತದೆ.  ಈ ಪ್ರದೇಶವು ಪ್ರಧಾನವಾಗಿ ಬೃಹದಾಕಾರದ ಬಂಡೆಗಳಿಂದ ಕೂಡಿರುತ್ತದೆ. ಇಲ್ಲಿ ಕಂಡುಬರುವ ಆಳ್ವಾದ ಗುಹೆಗಳು ಹಲವು ಬಗೆಯ ಪಕ್ಷಿ, ಪ್ರಾಣಿ ಮತ್ತು ವಿಶಿಷ್ಟ ಪ್ರಬೇಧದ  ಸಸ್ಯಗಳಿಗೆ ಆವಾಸಸ್ಥಾನವಾಗಿದೆ. ಪಕ್ಷಿಪಾತಾಳಂ ಮಾನಂದವಾಡಿಯ ಹತ್ತಿರವಿದ್ದು, ಇದನ್ನು ತಿರುನೆಲ್ಲಿಯ ಅರಣ್ಯದಿಂದ ಪ್ರಾರಂಭವಾಗುವ 7 ಕಿ.ಮೀ ಟ್ರೆಕ್ಕಿಂಗಿನ ಮೂಲಕ ತಲುಪಬಹುದಾಗಿದೆ. ಪಕ್ಷಿಪಾತಾಳಂಗೆ ಭೇಟಿ ಕೊಡಲಿಚ್ಛಿಸುವ ಪ್ರವಾಸಿಗರು ಉತ್ತರ ವಯನಾಡಿನ ಡಿಎಫ್‌ಒ ಅವರಿಂದ ಅನುಮತಿಯನ್ನು ಪಡೆಯಬೇಕು.

ಬಾಣಾಸುರಸಾಗರ ಅಣೆಕಟ್ಟು.
ಬಾಣಾಸುರಸಾಗರದಲ್ಲಿರುವ ಅಣೆಕಟ್ಟನ್ನು ಭಾರತದಲ್ಲಿಯೇ ಅತಿದೊಡ್ಡ ಮಣ್ಣಿನ ಅಣೆಕಟ್ಟೆಂದು ಪರಿಗಣಿಸಲಾಗಿದೆ. ಈ ಅಣೆಕಟ್ಟು ವಯನಾಡಿನ ನೈರುತ್ಯಭಾಗದಲ್ಲಿದ್ದು ಕರಲಾಡ್ ಸರೋವರಕ್ಕೆ ಸಮೀಪವಿದೆ. ಬಾಣಾಸುರಸಾಗರದ ಯೋಜನಾಪ್ರದೇಶವು ಬಾಣಾಸು ಶಿಖರದ ಟ್ರೆಕ್ಕಿಂಗ್‌ಗಳ ಪ್ರಾರಂಭಿಕ ತಾಣವೂ ಆಗಿರುತ್ತದೆ. ಸುತ್ತಮುತ್ತಲಿನ ಪ್ರದೇಶಗಳನ್ನು ಜಲಾಶಯವು ಮುಳುಗಡೆ ಮಾಡಿದ ನಂತರ ಉಂಟಾದ ಹಲವು ದ್ವೀಪಗಳು ಇಲ್ಲಿನ ವೈಶಿಷ್ಟ್ಯ.

ವಯನಾಡಿನ ಚಿತ್ತಾಪಹಾರಿ ನೋಟಗಳು, ಶಬ್ಧಗಳು ಮತ್ತು ಕಂಪುಗಳನ್ನು ಆಸ್ವಾದಿಸುತ್ತಾ ನೀವು ವಯನಾಡಿನ ಕೆಲವು ವೈಶಿಷ್ಟ್ಯಗಳಾದ ಸಂಬಾರ ಪದಾರ್ಥಗಳು, ಕಾಫಿ, ಟೀ ಮತ್ತು ಬೊಂಬಿನ ಉತ್ಪನ್ನಗಳು, ಜೇನುತುಪ್ಪ ಮತ್ತು ಮೂಲಿಕಾಗಿಡಗಳ ಖರೀದಿಯನ್ನು ಮಾಡಬಹುದು.

No comments: